ಸೋನಿಪತ್ ಅಗಸ್ಟ್ 06: ತಂದೆ-ತಾಯಿಯ ತ್ಯಾಗಕ್ಕೆ ಮಕ್ಕಳು ನೀಡಿದ ಬೆಲೆ ಇದು! ತಮ್ಮ ಮೂವರು ಪುತ್ರಿಯರನ್ನು ಚೆನ್ನಾಗಿ ಓದಿಸಿ, ಉತ್ತಮ ಜೀವನ ಕಟ್ಟಿಕೊಡಲು ಬದುಕನ್ನೇ ಮುಡಿಪಾಗಿಟ್ಟಿದ್ದ ವೃದ್ಧ ತಂದೆಯೊಬ್ಬರು ವೃದ್ಧಾಶ್ರಮದಲ್ಲಿ ಅನಾಥರಾಗಿ ಕೊನೆಯುಸಿರೆಳೆದಿದ್ದಾರೆ. ಅಂತ್ಯಕ್ರಿಯೆಗೆ ಬರಲು ಸಮಯವಿಲ್ಲದ ಮಕ್ಕಳು, ತಂದೆಯ ಅಂತಿಮ ವಿಧಿವಿಧಾನಗಳನ್ನು ‘ವಿಡಿಯೋ ಕರೆ’ ಮೂಲಕ ವೀಕ್ಷಿಸಿದ ಘಟನೆ ಸೋನಿಪತ್ನಲ್ಲಿ ನಡೆದಿದೆ.
ಮುಂಬೈ ಮೂಲದ ಮಾಜಿ ಜವಳಿ ವ್ಯಾಪಾರಿಯಾಗಿದ್ದ ಶಿವಚರಣ್ ರಾಮ್ ರತನ್ ಗುಪ್ತಾ ಅವರು ತಮ್ಮ ಪತ್ನಿಯೊಂದಿಗೆ ಸೋನಿಪತ್ನ ಪಶ್ಚಿಮ ರಾಮ್ ನಗರದಲ್ಲಿರುವ ಸಮಾಜ ಕಲ್ಯಾಣ ಶಿಕ್ಷಣ ಸಮಿತಿ ನಡೆಸುವ ವೃದ್ಧಾಶ್ರಮದಲ್ಲಿ ಕಳೆದ ಒಂದೂವರೆ ವರ್ಷಗಳಿಂದ ವಾಸಿಸುತ್ತಿದ್ದರು. ಪತ್ನಿ ಮೀನಾ ಈ ಹಿಂದೆ ನಿಧನರಾಗಿದ್ದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಶಿವಚರಣ್ ಗುಪ್ತಾ ಅವರು ಮಂಗಳವಾರ ಬೆಳಗಿನ ಜಾವ 3.30ಕ್ಕೆ ಕೊನೆಯುಸಿರೆಳೆದಿದ್ದಾರೆ.
ಗುಪ್ತಾ ಅವರ ನಿಧನದ ಸುದ್ದಿ ತಿಳಿಸಿದ ಆಡಳಿತ ಮಂಡಳಿ, ಸೋನಿಪತ್ಗೆ ಬರುವಂತೆ ಪುತ್ರಿಯರನ್ನು ಕೇಳಿಕೊಂಡಿತ್ತು. ಆದರೆ, ನೇಪಾಳದಲ್ಲಿ ಶಿಕ್ಷಕಿಯಾಗಿರುವ ಹಿರಿಯ ಮಗಳು ಅನಿತಾ, ಯುಪಿಯ ಆಜಂಘಢದಲ್ಲಿರುವ ನಿಶಾ ಹಾಗೂ ಮುಂಬೈನ ಕಿರಿಯ ಮಗಳು ಪ್ರಿಯಾ – ಮೂವರೂ ಬರಲು ನಿರಾಕರಿಸಿದರು. ಹಿರಿಯ ಮಗಳು 5,100 ಆನ್ಲೈನ್ ಕಳುಹಿಸಿ ತಂದೆಯ ಸಂಸ್ಕಾರ ನೆರವೇರಿಸುವಂತೆ ಕೇಳಿಕೊಂಡರು. ವಿಡಿಯೋ ಕರೆ ಮೂಲಕ ಅಂತ್ಯಕ್ರಿಯೆ ನೋಡುವಾಗ ಒಬ್ಬ ಮಗಳು, “ಇನ್ನೆಷ್ಟು ಸಮಯ ಆಗುತ್ತದೆ? ನಮಗೆ ಊಟ ಮಾಡಿ ಸ್ನಾನಕ್ಕೂ ಹೋಗಬೇಕಿದೆ,” ಎಂದು ಹೇಳಿದ್ದು ಅಲ್ಲಿ ಸಾಕ್ಷಿಯಾಗಿದ್ದವರ ಕಣ್ಣಲ್ಲಿ ನೀರು ತರಿಸಿತ್ತು!
ಮಕ್ಕಳು ತಂದೆಯ ಅಸ್ಥಿಯನ್ನು ಸೋನಿಪತ್ಗೆ ಬಂದು ಪಡೆಯಲು ನಿರಾಕರಿಸಿ, ಗಂಗಾ ನದಿಯಲ್ಲೇ ವಿಸರ್ಜಿಸಲು ಕೋರಿದ್ದಾರೆ. ಅಂತಿಮವಾಗಿ ವೃದ್ಧಾಶ್ರಮದ ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳೇ ತಂದೆಯ ಅಂತ್ಯಕ್ರಿಯೆ ನೆರವೇರಿಸಿದರು. ಮರಣೋತ್ತರವಾಗಿ ಶಿವಚರಣ್ ಅವರ ನೇತ್ರದಾನ ಮಾಡಲಾಗಿದ್ದು, ಅವರಿಬ್ಬರ ಕಣ್ಣುಗಳು ಮತ್ತೊಬ್ಬರಿಗೆ ಬೆಳಕಾಗಲಿವೆ. ಹೆತ್ತವರನ್ನು ಈ ರೀತಿ ನಡುನೀರಿನಲ್ಲಿ ಕೈಬಿಟ್ಟ ಮಕ್ಕಳ ನಡವಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

























