ಪುತ್ತೂರು: ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರಾಗಿರುವುದು ಪುತ್ತೂರು ವಿಧಾನಸಭಾ ಕ್ಷೇತ್ರದ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಅತ್ಯಂತ ಸಂತಸದ ಮತ್ತು ಐತಿಹಾಸಿಕ ಬೆಳವಣಿಗೆಯಾಗಿದೆ. ಪುತ್ತೂರಿನಲ್ಲಿ ಕ್ಯಾಂಪ್ಕೋದಿಂದ ಸೀಮಿತ ಪ್ರಮಾಣದಲ್ಲಿ ಹೊರ ರಾಜ್ಯದ ವ್ಯಾಪಾರಿಗಳು ಪುತ್ತೂರಿಗೆ ಬರುತ್ತಿದ್ದರು. ಆದರೆ ಮೆಡಿಕಲ್ ಕಾಲೇಜು ಸ್ಥಾಪನೆಯಾದ ನಂತರ ವರ್ಷಪೂರ್ತಿ ಸಾವಿರಾರು ಜನರ ಓಡಾಟದಿಂದ ಪುತ್ತೂರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಪ್ರಮುಖ ಕೇಂದ್ರವಾಗಿ ಬೆಳೆಯಲಿದೆ ಎಂದು ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಮೆಡಿಕಲ್ ಕಾಲೇಜು ಸ್ಥಾಪನೆಯು ಕೇವಲ ವೈದ್ಯಕೀಯ ಶಿಕ್ಷಣಕ್ಕೆ ಸೀಮಿತವಾಗಿರುವ ಯೋಜನೆಯಲ್ಲ. ಇದು ಪುತ್ತೂರಿನ ಸರ್ವತೋಮುಖ ಅಭಿವೃದ್ಧಿಗೆ ಹೊಸ ಅಧ್ಯಾಯವನ್ನು ಆರಂಭಿಸಲಿದೆ. ಆರೋಗ್ಯ ಸೇವೆಗಳ ಗುಣಮಟ್ಟ ಹೆಚ್ಚುವುದರ ಜೊತೆಗೆ, ಸ್ಥಳೀಯ ಯುವಕರಿಗೆ ವೈದ್ಯಕೀಯ ಶಿಕ್ಷಣದ ಅವಕಾಶಗಳು ವಿಸ್ತರಿಸಲಿವೆ. ಸಾವಿರಾರು ವಿದ್ಯಾರ್ಥಿಗಳು, ವೈದ್ಯರು, ಸಿಬ್ಬಂದಿ ಹಾಗೂ ಸಾರ್ವಜನಿಕರ ಆಗಮನದಿಂದ ವ್ಯಾಪಾರ, ವಾಣಿಜ್ಯ, ಸಾರಿಗೆ, ವಸತಿ, ಹೋಟೆಲ್ ಉದ್ಯಮ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಲಿವೆ. ಒಟ್ಟಿನಲ್ಲಿ ಈ ಮಹತ್ವದ ಯೋಜನೆಯನ್ನು ಪುತ್ತೂರಿಗೆ ತರುವಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರ ನಿರಂತರ ಪ್ರಯತ್ನ, ಬದ್ಧತೆ ಮತ್ತು ದೂರದೃಷ್ಟಿಯ ಫಲವಾಗಿ ಇಂದು ಈ ಕನಸು ನನಸಾಗುತ್ತಿರುವುದು ಅಭಿನಂದನಾರ್ಹವಾಗಿದೆ. ಚುನಾವಣೆಯ ವೇಳೆ ಮೆಡಿಕಲ್ ಕಾಲೇಜನ್ನು ಪುತ್ತೂರಿಗೆ ತರುತ್ತೇನೆ ಎಂದು ನೀಡಿದ ಭರವಸೆಯನ್ನು ಅಶೋಕ್ ಕುಮಾರ್ ರೈ ಅವರು ಅಕ್ಷರಶಃ ಈಡೇರಿಸಿದ್ದಾರೆ. ಅನೇಕರಿಗೆ ಅದು ಸಾಧ್ಯವೇ ಎಂಬ ಅನುಮಾನವಿದ್ದರೂ, ಇಂದು ಆ ಮಾತು ಕಾರ್ಯರೂಪಕ್ಕೆ ಬಂದಿದೆ. ಇದಕ್ಕಾಗಿ ಅವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಂಬಂಧಿತ ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರದ ಮಟ್ಟದಲ್ಲಿಯೂ ನಿರಂತರವಾಗಿ ನಡೆಸಿದ ಪ್ರಯತ್ನಗಳನ್ನು ನಾವು ಎಂದಿಗೂ ಮರೆಯಬಾರದು ಎಂದರು.
ಪುತ್ತೂರಿನಲ್ಲಿ ಈಗಾಗಲೇ ಕ್ಯಾಂಪ್ಕೋ ಇರುವುದರಿಂದ ಕೃಷಿಕರಿಗೆ ಅಡಿಕೆ, ಕೋಕೋ, ಕಾಳುಮೆಣಸು ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ದೊರೆತಿದೆ. ಕ್ಯಾಂಪ್ಕೋ ಹಾಗೂ ಅದರ ಚಾಕೊಲೇಟ್ ಕಾರ್ಖಾನೆಯಿಂದ ಪುತ್ತೂರಿಗೆ ಒಂದು ವಿಶಿಷ್ಟ ಗುರುತು ಮತ್ತು ಸೀಮಿತ ಮಟ್ಟದಲ್ಲಿ ವ್ಯಾಪಾರ-ವ್ಯವಹಾರಗಳ ಬೆಳವಣಿಗೆಯೂ ಆಗಿದೆ. ಆದರೆ ಈಗ ಪುತ್ತೂರಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರಾಗಿರುವುದು ಅದಕ್ಕಿಂತಲೂ ದೊಡ್ಡ ಪರಿವರ್ತನೆಗೆ ಕಾರಣವಾಗಲಿರುವ ಐತಿಹಾಸಿಕ ಬೆಳವಣಿಗೆಯಾಗಿದೆ.ಮೆಡಿಕಲ್ ಕಾಲೇಜು ಸ್ಥಾಪನೆಯಾದ ಬಳಿಕ ಪುತ್ತೂರಿನ ಆರ್ಥಿಕ ವ್ಯವಸ್ಥೆ, ವ್ಯಾಪಾರ, ಶಿಕ್ಷಣ, ಆರೋಗ್ಯ, ಉದ್ಯೋಗ, ಮೂಲಸೌಕರ್ಯ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಮಹತ್ವದ ಬದಲಾವಣೆಗಳು ಕಂಡುಬರಲಿವೆ. ಭೂಮಿಯ ಮೌಲ್ಯ ಹೆಚ್ಚಾಗಲಿದೆ, ಹೊಸ ಹೂಡಿಕೆಗಳು ಬರಲಿವೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ವಿದ್ಯಾರ್ಥಿಗಳು, ವೈದ್ಯರು, ಸಿಬ್ಬಂದಿ ಮತ್ತು ಅವರ ಕುಟುಂಬಗಳು ಪುತ್ತೂರಿನಲ್ಲಿ ನೆಲೆಸಲಿದ್ದಾರೆ. ಇದರಿಂದ ಮನೆಗಳು, ವಾಣಿಜ್ಯ ಕಟ್ಟಡಗಳು, ಹೋಟೆಲ್ಗಳು, ಸಾರಿಗೆ, ಅಂಗಡಿಗಳು ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಹೊಸ ಚೈತನ್ಯ ಸಿಗಲಿದೆ ಎಂದು ಹೇಮನಾಥ ಶೆಟಿ ಹೇಳಿದರು.
ಒಂದು ಪ್ರದೇಶದ ಅಭಿವೃದ್ಧಿಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಪಾತ್ರ ಎಷ್ಟು ಮಹತ್ವದ್ದಾಗಿದೆ ಎಂಬುದಕ್ಕೆ ನಮ್ಮ ಜಿಲ್ಲೆಯಲ್ಲೇ ಹಲವು ಉದಾಹರಣೆಗಳಿವೆ. ಸುಳ್ಯದಲ್ಲಿ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಿಂದ ಆ ಪ್ರದೇಶವು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದೇಶವ್ಯಾಪಿ ಗುರುತಿಸಿಕೊಂಡಿದೆ. ಮಣಿಪಾಲ ಹಾಗೂ ಮೂಡಬಿದಿರೆಯೂ ಶಿಕ್ಷಣ ಸಂಸ್ಥೆಗಳ ಮೂಲಕ ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪಿವೆ. ಇದೇ ರೀತಿಯ ಅಭಿವೃದ್ಧಿಯ ಪಥದಲ್ಲಿ ಈಗ ಪುತ್ತೂರೂ ಸಾಗುವ ಅವಕಾಶವನ್ನು ಪಡೆದಿದೆ. ವರ್ಷಗಳಿಂದ ಪುತ್ತೂರನ್ನು ಶಿಕ್ಷಣ, ಆರೋಗ್ಯ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಬೇಕೆಂಬ ಜನರ ಆಶಯವಿತ್ತು. ಮೆಡಿಕಲ್ ಕಾಲೇಜಿನ ಸ್ಥಾಪನೆಯಿಂದ ಆ ಕನಸು ನನಸಾಗುವ ಹಂತಕ್ಕೆ ಬಂದಿದೆ. ಮೆಡಿಕಲ್ ಕಾಲೇಜಿನ ಪರಿಣಾಮ ಪುತ್ತೂರು ನಗರಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಸುಮಾರು 15 ರಿಂದ 20 ಕಿಲೋಮೀಟರ್ ವ್ಯಾಪ್ತಿಯ ಗ್ರಾಮಗಳು ಮತ್ತು ಪಟ್ಟಣಗಳಿಗೂ ಇದರ ಅಭಿವೃದ್ಧಿಯ ಲಾಭ ತಲುಪಲಿದೆ. ಇದು ಮುಂದಿನ ಹಲವು ದಶಕಗಳವರೆಗೆ ಪುತ್ತೂರಿನ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಬಲ ತುಂಬುವ ಯೋಜನೆಯಾಗಲಿದೆ. ಆದ್ದರಿಂದ ಈ ಐತಿಹಾಸಿಕ ಸಾಧನೆಗೆ ಕಾರಣರಾದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಪುತ್ತೂರಿನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಈ ಯೋಜನೆಯ ಕಾಮಗಾರಿ ಶೀಘ್ರವಾಗಿ ಪೂರ್ಣಗೊಂಡು ಮೆಡಿಕಲ್ ಕಾಲೇಜು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿ ಎಂಬುದು ನಮ್ಮ ಆಶಯವಾಗಿದೆ ಎಂದು ಹೇಮನಾಥ ಶೆಟ್ಟಿ ಹೇಳಿದರು.
ಪುತ್ತೂರಿಗೆ ಹಿಂದೆ ಹಲವು ಶಾಸಕರು, ಸರ್ಕಾರಗಳು ಹಾಗೂ ರಾಜಕೀಯ ನಾಯಕರು ಇದ್ದರೂ, ಸರ್ಕಾರಿ ಮೆಡಿಕಲ್ ಕಾಲೇಜನ್ನು ತರಲು ಸಾಧ್ಯವಾಗಿರಲಿಲ್ಲ. ಆ ಮಹತ್ವದ ಸಾಧನೆಯನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ಮಾಡಿದ್ದಾರೆ. ಅವರ ಸ್ಥಾನದಲ್ಲಿ ಯಾರಾದರೂ ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಮಾತ್ರ ಯೋಚಿಸಿದ್ದರೆ ಖಾಸಗಿ ಮೆಡಿಕಲ್ ಕಾಲೇಜನ್ನು ಸ್ಥಾಪಿಸಬಹುದಾಗಿತ್ತು. ಆದರೆ ಅವರು ತಮ್ಮ ವೈಯಕ್ತಿಕ ಲಾಭವನ್ನು ಬದಿಗಿಟ್ಟು, ಸಾರ್ವಜನಿಕರಿಗೆ ಅನುಕೂಲವಾಗುವ ಸರ್ಕಾರಿ ಮೆಡಿಕಲ್ ಕಾಲೇಜನ್ನು ಪುತ್ತೂರಿಗೆ ತರಲು ಶ್ರಮಿಸಿದ್ದಾರೆ ಎಂದು ಹೇಮನಾಥ ಶೆಟ್ಟಿ ಹೇಳಿದ ಅವರು ಮೆಡಿಕಲ್ ಕಾಲೇಜಿನಿಂದ ಪುತ್ತೂರಿಗೆ ಪುತ್ತೂರಿನ ಜನತೆಗೆ ಆಗುವ ಪ್ರಯೋಜನಗಳನ್ನು ವಿವರವಾಗಿ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ನಗರಯೋಜನಾ ಪ್ರಾಧಿಕಾರದ ಸದಸ್ಯರಾದ ಅನ್ವರ್ ಖಾಸಿಂ, ಲ್ಯಾನ್ಸಿ ಮಸ್ಕರೇನಸ್, ಬ್ಲಾಕ್ ಕಾರ್ಯದರ್ಶಿ ಗಂಗಾದರ್, ಸಾಮಾಜಿಕ ಜಾಲತಾಣದ ಜಿಲ್ಲಾ ಸಮಿತಿ ಅಧ್ಯಕ್ಷ ಸುಪ್ರಿತ್ ಕಣ್ಣರಾಯ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
























