ಮುಂಬೈ: ಆರಂಭವಾದ ಕೆಲವೇ ದಿನಗಳಲ್ಲಿ ಸಾಮಾಜಿಕ ಮಾಧ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ವಿಡಂಬನಾತ್ಮಕ ಡಿಜಿಟಲ್ ಸಂಘಟನೆಯಾದ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ), ನೀಟ್ ಅಕ್ರಮದ ವಿರುದ್ಧ ದೆಹಲಿಯಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಇದೀಗ CJP, 12 ಸದಸ್ಯರನ್ನು ಒಳಗೊಂಡ ರಾಷ್ಟ್ರೀಯ ಕಾರ್ಯಕಾರಿ ಸಮತಿಯನ್ನು ಅಧಿಕೃತವಾಗಿ ಘೋಷಿಸಿದ್ದು, 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮಾತ್ರ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ. ಈ ಸಮಿತಿಯಲ್ಲಿ ವಕೀಲರು, ಸಿಎಗಳು, ಎಂಜಿನಿಯರ್ಗಳು ಮತ್ತು ಪತ್ರಕರ್ತರು ಸೇರಿದ್ದಾರೆ ಹಲವು ವೃತ್ತಿಪರರು ಇದ್ದಾರೆ.
ಈ ಕೋರ್ ಕಮಿಟಿ ಸದಸ್ಯರು ಮುಂದಿನ ತಿಂಗಳಿನಿಂದ, ಸದಸ್ಯತ್ವ ಅಭಿಯಾನವನ್ನು ನಡೆಸಲು ದೇಶಾದ್ಯಂತ ಪ್ರಯಾಣಿಸಲಿದ್ದಾರೆ.
ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರನ್ನು ರಾಷ್ಟ್ರೀಯ ಸಂಚಾಲಕರನ್ನಾಗಿ ನೇಮಿಸಲಾಗಿದೆ. ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್ ಮತ್ತು ವಕ್ತಾರ ಅಶುತೋಷ್ ರಂಕಾ ಅವರನ್ನು ಸಿಜೆಪಿ ಸಹ ಸಂಚಾಲಕರಾಗಿ ನೇಮಕ ಮಾಡಲಾಗಿದೆ.
ವಿಜಯ್ ರೆಡ್ಡಿ ಮಲ್ಲಂಗಿ ಅವರನ್ನು ಸಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿ ಹಾಗೂ ದಕ್ಷಿಣ ವಲಯದ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.
ವೈಷ್ಣವಿ ಗೌರ್ ಅವರನ್ನು ಸಂಶೋಧನೆ ಮತ್ತು ನೀತಿ ವಿಭಾಗದ ಮುಖ್ಯಸ್ಥರಾಗಿ, ರತ್ನಾ ಸಿಂಗ್ ಅವರನ್ನು ಕಾನೂನು ವಿಭಾಗದ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ.
ಯೋಗೇಶ್ ಇಂಗಲೆ ಅವರನ್ನು ಹಣಕಾಸು ವಿಭಾಗದ ಮುಖ್ಯಸ್ಥರಾಗಿ ಹಾಗೂ ಪಶ್ಚಿಮ ವಲಯದ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ.
ದೀಪಕ್ ಬಲಿಯನ್ ಅವರನ್ನು ಸಂಘಟನಾ ಸಹ ಉಸ್ತುವಾರಿ ಹಾಗೂ ಉತ್ತರ ವಲಯದ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ.
ಮುಂದಿನ ಆರು ತಿಂಗಳೊಳಗೆ ದೇಶಾದ್ಯಂತ ರಾಜ್ಯ ಸಮಿತಿಗಳು, ಲೋಕಸಭಾ ಮಟ್ಟದ ಸಮಿತಿಗಳು ಹಾಗೂ ನಗರ ಮಟ್ಟದ ಸಮನ್ವಯ ಘಟಕಗಳನ್ನು ರಚಿಸಲಾಗುವುದು ಎಂದು ಸಿಜೆಪಿ ಪಕ್ಷವು ತಿಳಿಸಿದೆ. ಇಂದು ಘೋಷಿಸಿದ ಪದಾಧಿಕಾರಿಗಳನ್ನು ಹೊರತುಪಡಿಸಿ, ಪಕ್ಷವನ್ನು ಪ್ರತಿನಿಧಿಸಲು ಬೇರೆ ಯಾವುದೇ ವ್ಯಕ್ತಿಗೆ ಮಾನ್ಯತೆ ಇಲ್ಲ ಎಂದು ಸಿಜೆಪಿ ಪಕ್ಷವು ಸ್ಪಷ್ಟಪಡಿಸಿದೆ.
ಅಭಿಜೀತ್ ದೀಪ್ಕೆ ಅವರ ನಿವಾಸದಲ್ಲಿ ನಡೆದ ಸಿಜೆಪಿಯ ಉನ್ನತ ಮಟ್ಟದ ಎರಡು ದಿನಗಳ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

























