ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರೋವಾಲ್ ಜಿಲ್ಲೆಯ ಸಿರಾಜ್ ಗ್ರಾಮದಲ್ಲಿದ್ದ ಸುಮಾರು 125 ವರ್ಷಗಳಷ್ಟು ಹಳೆಯ ಐತಿಹಾಸಿಕ ಹಿಂದೂ ದೇವಾಲಯವನ್ನು ಪಕ್ಕದ ಮದರಸಾ ವಿಸ್ತರಣೆಗಾಗಿ ಗುಂಪೊಂದು ನೆಲಸಮ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಸುಮಾರು 1 ಸಾವಿರ ಚದರ ಮೀಟರ್ ವಿಸ್ತೀರ್ಣದಲ್ಲಿದ್ದ ಈ ಪ್ರಾಚೀನ ದೇಗುಲದ ಧ್ವಂಸವನ್ನು ಖಂಡಿಸಿರುವ ಪಾಕಿಸ್ತಾನದ ಮಾನವ ಹಕ್ಕುಗಳ ಕಾರ್ಯಕರ್ತರು, ಅಲ್ಪಸಂಖ್ಯಾತ ಸಂಘಟನೆಗಳು ಹಾಗೂ ಸ್ಥಳೀಯ ಹಿಂದೂ ಮುಖಂಡರು, ಶೆಹಬಾಜ್ ಷರೀಫ್ ನೇತೃತ್ವದ ಫೆಡರಲ್ ಸರ್ಕಾರ ಹಾಗೂ ಮುಖ್ಯಮಂತ್ರಿ ಮರ್ಯಮ್ ನವಾಜ್ ನೇತೃತ್ವದ ಪಂಜಾಬ್ ಸರ್ಕಾರ ಕೂಡಲೇ ದೇವಾಲಯವನ್ನು ಪುನರ್ನಿರ್ಮಿಸಬೇಕೆಂದು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ನಿಷೇಧಿತ ಬಲಪಂಥೀಯ ಇಸ್ಲಾಮಿಕ್ ಸಂಘಟನೆಯ ಸದಸ್ಯರು ಆಗಸ್ಟ್ 21 ರಂದು ದೇವಾಲಯವನ್ನು ಕೆಡವಿ, ಅದರ ಶಿಖರದ ಲೋಹದ ಭಾಗಗಳು ಮತ್ತು ಇಟ್ಟಿಗೆಗಳನ್ನು ದೋಚಿಕೊಂಡು, ಆ ಜಾಗವನ್ನು ಪಕ್ಕದ ಸೆಮಿನರಿಗೆ ಅಕ್ರಮವಾಗಿ ಸೇರಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ದೇವಾಲಯದ ಪಕ್ಕದ ಜಮೀನಿನ ಗುತ್ತಿಗೆಯನ್ನು ಬಾಡಿಗೆ ಪಾವತಿಸದ ಕಾರಣ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ETPB) ಜನವರಿಯಲ್ಲೇ ರದ್ದುಗೊಳಿಸಿತ್ತು. ಅಕ್ರಮ ನಿವಾಸಿಗಳನ್ನು ತೆರವುಗೊಳಿಸಿ ಸೀಲ್ ಮಾಡಲು ಉಪ ಆಡಳಿತಾಧಿಕಾರಿ ಆದೇಶಿಸಿದ್ದರೂ, ಸ್ಥಳೀಯ ಆಡಳಿತ ಮತ್ತು ಪೊಲೀಸರು ಕ್ರಮ ಕೈಗೊಳ್ಳದೆ ದೇಗುಲ ಧ್ವಂಸಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಪಾಕಿಸ್ತಾನ್ ಮಸಿಹಾ ಮಿಲ್ಲತ್ ಪಕ್ಷದ (PMMP) ಅಧ್ಯಕ್ಷ ಅಸ್ಲಾಂ ಪರ್ವೇಜ್ ಸಹೋತ್ರಾ ಆರೋಪಿಸಿದ್ದಾರೆ.
ನರೋವಲ್ ಜಿಲ್ಲಾ ಶಾಂತಿ ಸಮಿತಿಯ ಹಿಂದೂ ಸದಸ್ಯ ರತ್ತನ್ ಲಾಲ್ ಮಾತನಾಡಿ, “ಮದರಸಾ ಒತ್ತುವರಿಯಿಂದಾಗಿ ಸ್ಥಳೀಯ ಹಿಂದೂಗಳು ಆ ಜಾಗಕ್ಕೆ ಭೇಟಿ ನೀಡಲು ಸಹ ಭಯಪಡುವಂತಾಗಿದೆ” ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 11 ರ ಪೊಲೀಸ್ ವರದಿಯಲ್ಲೇ ಈ ದೇವಾಲಯದ ಭದ್ರತಾ ಅಪಾಯ ಮತ್ತು ಕಿಡಿಗೇಡಿಗಳಿಂದ ಹಾನಿಯಾಗುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು ಎಂಬುದು ಬಯಲಾಗಿದೆ. ಪಾಕಿಸ್ತಾನದಲ್ಲಿ ಹಿಂದೂ, ಸಿಖ್ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಪೂಜಾ ಸ್ಥಳಗಳ ಮೇಲೆ ಅಕ್ರಮ ಒತ್ತುವರಿ ಮತ್ತು ದಾಳಿಗಳು ನಿರಂತರವಾಗಿ ವರದಿಯಾಗುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿ ಡಜನ್ಗೂ ಹೆಚ್ಚು ಪುರಾತನ ಮಂದಿರಗಳು ಧ್ವಂಸಗೊಂಡಿವೆ.
ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (USCIRF) ಸೇರಿದಂತೆ ಜಾಗತಿಕ ಮಾನವ ಹಕ್ಕುಗಳ ಸಂಸ್ಥೆಗಳು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಆಸ್ತಿಗಳ ರಕ್ಷಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಪದೇಪದೇ ಕಳವಳ ವ್ಯಕ್ತಪಡಿಸುತ್ತಲೇ ಬಂದಿವೆ.
























