ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ ನೀಡಿರುವ ಅಂತಿಮ ವರದಿಯ ವಿಚಾರದಲ್ಲಿ ಬೆಳ್ತಂಗಡಿಯ ಅಧಿಕ ಸಿ.ಜೆ.ಮತ್ತು ಜೆಎಂಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಶಶಾಂಕ್ ನಾಗೇಂದ್ರ ಭಟ್ ಅವರ ಮುಂದೆ ಆ.29ರಂದು ಎಸ್.ಐ.ಟಿ. ಪರ ವಕೀಲರಾದ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಪುತ್ತೂರು ಅವರು ಸುಧೀರ್ಘ ವಾದ ಮಂಡಿಸಿದ್ದಾರೆ.
ಧರ್ಮಸ್ಥಳ ಗ್ರಾಮ ಮತ್ತು ಆಸುಪಾಸಿನಲ್ಲಿ ಮೃತದೇಹಗಳನ್ನು ಕಾನೂನು ಬಾಹಿರವಾಗಿ ಹೂತು ಹಾಕಿಸಲಾಗಿದೆ ಎಂದು ಮಂಡ್ಯ ಮೂಲದ ಚಿನ್ನಯ್ಯ ನೀಡಿದ್ದ ದೂರಿನ ಆಧಾರದಲ್ಲಿ ರಾಜ್ಯ ಸರಕಾರದಿಂದ ರಚಿಸಲ್ಪಟ್ಟಿದ್ದ ವಿಶೇಷ ತನಿಖಾ ತಂಡ ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿರುವ 7000ಕ್ಕೂ ಅಧಿಕ ಪುಟಗಳ ಸಂಪೂರ್ಣ ವರದಿಯ ಕುರಿತು ದಿವ್ಯರಾಜ್ ಹೆಗ್ಡೆ ಅವರುವಿಸ್ತ್ರತ ವಾದ ಮಂಡನೆ ಮಾಡಿದರು.
ಸುಮಾರು ಒಂದೂವರೆ ಗಂಟೆ ವಾದ ಮಂಡಿಸಿದ ಅವರು ಚಿನ್ನಯ್ಯ ಎಸ್ಪಿ ಕಚೇರಿಗೆ ಕೊಟ್ಟ ದೂರು ಮತ್ತು ಆ ಬಳಿಕ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ. 39/2025ರಂತೆ ದಾಖಲಿಸಿದ್ದ ಕೇಸು ಸಂಪೂರ್ಣ ಸುಳ್ಳು. ಅದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಆದ್ದರಿಂದ ಆ ಪ್ರಕರಣವನ್ನು ಮುಕ್ತಾಯ ಮಾಡಬೇಕು. ಸುಳ್ಳು ದೂರು ನೀಡಿದ ಚಿನ್ನಯ್ಯ, ಸಂಚು ರೂಪಿಸಿದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ., ವಿಠಲ ಗೌಡ ಮತ್ತು ಸುಜಾತ ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರು ಬಿ.ಎನ್.ಎಸ್. 215ರಡಿ ನೀಡಿದ ವರದಿಯನ್ನು ದೂರು ಎಂದು ಪರಿಗಣಿಸಿ ಆರೋಪಿಗಳ ವಿರುದ್ಧ ವಿಚಾರಣೆ ನಡೆಸಬೇಕು. ಆರೋಪಿಗಳ ವಿರುದ್ಧ ದೂರು ದಾಖಲಿಸಿ ಸೆಷೆನ್ಸ್ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆ ಮಾಡಬೇಕು. ಸಾಕ್ಷಿ ದೂರುದಾರನಾಗಿ ಬಂದು ಚಿನ್ನಯ್ಯ ನ್ಯಾಯಾಧೀಶರ ಮುಂದೆ ಬಿ.ಎನ್.ಎಸ್.ಎಸ್. 183 ರಡಿ ನೀಡಿದ ಹೇಳಿಕೆ ಸುಳ್ಳು ಆಗಿರುವುದರಿಂದ ಈ ಬಗ್ಗೆ ಕೋರ್ಟ್ ಕ್ರಮಕೈಗೊಳ್ಳಬೇಕು. ತನಿಖಾಧಿಕಾರಿಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲು ನಿರ್ದೇಶನ ನೀಡಬೇಕು ಎಂದು ಎಪಿಪಿ ದಿವ್ಯರಾಜ್ ಹೆಗ್ಡೆ ನ್ಯಾಯಾಧೀಶರನ್ನು ಒತ್ತಾಯಿಸಿದರು.
ವಾದ ಆಲಿಸಿದ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ಮುಂದೂಡಿದರು. ಎಸ್ಐಟಿಯ ಎಸ್ಪಿ ಸಿ.ಎ.ಸೈಮನ್, ಸಿಬ್ಬಂದಿಗಳು ಹಾಗೂ ಚಿನ್ನಯ್ಯ ನ್ಯಾಯಾಲಯದಲ್ಲಿ ಹಾಜರಿದ್ದರು.
























