ಪುತ್ತೂರು- ಬಂಟ್ವಾಳ: ಪುಣಚ ಗ್ರಾಮದ ಎಸ್ಟಿ ಕುಟುಂಬಗಳ ಹಕ್ಕುಪತ್ರಕ್ಕಾಗಿ 3ನೇ ದಿನವೂ ಮುಂದುವರಿದ ಧರಣಿ: ಪ್ರತಿಭಟನಾ ನಿರತರಿಗೆ ಬಿಜೆಪಿ ನಿಯೋಗದ ಬೆಂಬಲ; ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ತೀವ್ರ ವಾಗ್ದಾಳಿ
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುಣಚ ಗ್ರಾಮದ 3ನೇ ವಾರ್ಡ್ನ ದೇವಿನಗರದಲ್ಲಿ ವಾಸಿಸುವ ಪರಿಶಿಷ್ಟ ಪಂಗಡದ ಮೂರು ಕುಟುಂಬಗಳಿಗೆ ಹಕ್ಕು ಪತ್ರ ನೀಡಬೇಕೆಂದು ಆಗ್ರಹಿಸಿ ಬಿ.ಸಿ.ರೋಡಿನ ಆಡಳಿತ ಸೌಧದ ಮುಂಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಜಿಲ್ಲಾ ಬಿಜೆಪಿ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಗೆ ಸಾಥ್ ನೀಡಿತು.
ಪುಣಚ ಗ್ರಾಮದ ಪರಿಶಿಷ್ಟ ಪಂಗಡದ (ST) ಅರ್ಹ ಕುಟುಂಬಗಳಿಗೆ ತಕ್ಷಣವೇ ಹಕ್ಕುಪತ್ರ ವಿತರಿಸಬೇಕೆಂದು ಆಗ್ರಹಿಸಿ, ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಗಿರಿಧರ್ ನಾಯ್ಕ್ ನೇತೃತ್ವದಲ್ಲಿ ಪುಣಚ ಗ್ರಾಮದ 3 ಕುಟುಂಬಗಳು ಕಳೆದ ಮೂರು ದಿನಗಳಿಂದ ಬಂಟ್ವಾಳ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ತೀವ್ರಗೊಂಡಿದೆ. ಈ ಹೋರಾಟಕ್ಕೆ ಪುತ್ತೂರು ಮತ್ತು ಬಂಟ್ವಾಳದ ಬಿಜೆಪಿ ನಿಯೋಗವು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಂಪೂರ್ಣ ಸಾಥ್ ನೀಡಿದೆ.
8 ವರ್ಷವಾದರೂ ಸಿಗದ ಹಕ್ಕುಪತ್ರ: 3 ದಿನಗಳಿಂದ ಧರಣಿ :
ಪುಣಚ ಗ್ರಾಮದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಒಟ್ಟು 13 ಮನೆಗಳಿದ್ದು, ಆ ಪೈಕಿ 5 ಮನೆಗಳನ್ನು ನಿರ್ಮಿಸಿ ಬರೋಬ್ಬರಿ 8 ವರ್ಷಗಳೇ ಕಳೆದಿವೆ. ಆದರೆ, ಮನೆ ಕಟ್ಟಿ ಇಷ್ಟು ವರ್ಷಗಳಾಗಿದ್ದರೂ ಈವರೆಗೆ ಅವರಿಗೆ ಹಕ್ಕುಪತ್ರ ಮಾತ್ರ ದೊರೆತಿಲ್ಲ. ತಮಗೆ ಕಾನೂನುಬದ್ಧವಾಗಿ ಮತ್ತು ಅರ್ಹವಾಗಿ ಸಿಗಬೇಕಾದ ಹಕ್ಕುಪತ್ರಗಳನ್ನು ಒದಗಿಸುವಂತೆ ಆಗ್ರಹಿಸಿ ಸಂತ್ರಸ್ತ ಕುಟುಂಬಗಳು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯೊಂದಿಗೆ ಸೇರಿ ತಾಲೂಕು ಕಚೇರಿ ಎದುರು ಹಗಲಿರುಳು ಧರಣಿ ಕುಳಿತಿದ್ದಾರೆ.
ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ: ಪ್ರತಿಭಟನಾ ನಿರತರಿಗೆ ಬೆಂಬಲ ಸೂಚಿಸಲು ಸ್ಥಳಕ್ಕೆ ಧಾವಿಸಿದ ಪುತ್ತೂರು ಮತ್ತು ಬಂಟ್ವಾಳದ ಬಿಜೆಪಿ ಮುಖಂಡರ ನಿಯೋಗವು, ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡರು, “ನಾವು ಸರಕಾರಿ ಭೂಮಿಯಲ್ಲಿ ಬಡವರ ಮತ್ತು ಪರಿಶಿಷ್ಟ ವರ್ಗದವರ ಹಕ್ಕನ್ನು ಕೇಳುತ್ತಿದ್ದೇವೆಯೇ ಹೊರತು, ಶಾಸಕರು ಅವರಪ್ಪನ ಮನೆಯಿಂದ ತಂದು ಜಾಗ ಕೊಡುವುದಲ್ಲ!” ಎಂದು ಅತ್ಯಂತ ತೀಕ್ಷ್ಣವಾದ ಮಾತುಗಳಿಂದ ವಾಗ್ದಾಳಿ ನಡೆಸಿದರು.
ಬಡವರ ಹಕ್ಕನ್ನು ಕಸಿದುಕೊಳ್ಳುತ್ತಿರುವ ಜನಪ್ರತಿನಿಧಿಗಳ ಧೋರಣೆ ಸರಿಯಲ್ಲ ಎಂದು ಅವರು ಕಿಡಿಕಾರಿದರು.
ಅರ್ಹ ಕುಟುಂಬಗಳಿಗೆ ತಕ್ಷಣವೇ ಹಕ್ಕುಪತ್ರ ಸಿಗುವವರೆಗೂ ಈ ಹೋರಾಟ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದು, ಅಹೋರಾತ್ರಿ ಧರಣಿಯಿಂದಾಗಿ ಬಂಟ್ವಾಳ ತಾಲೂಕು ಕಚೇರಿ ಮುಂಭಾಗದಲ್ಲಿ ರಾಜಕೀಯ ಮತ್ತು ಸಾಮಾಜಿಕ ವಲಯದ ಜಿದ್ದಾಜಿದ್ದಿ ಮತ್ತಷ್ಟು ಕಾವೇರಿದೆ.
ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಮಂಡಲದ ಬಿಜೆಪಿ ಕಾರ್ಯಕರ್ತರು, ಬಂಟ್ವಾಳ ಮಂಡಲದ ಬಿಜೆಪಿ ಕಾರ್ಯಕರ್ತರು ಜೊತೆಗೂಡಿ ಬಡವರ ಶೋಷಣೆ ಮಾಡುತ್ತಿರುವ ಸರಕಾರ ಹಾಗೂ ಪುತ್ತೂರು ಶಾಸಕರ ವಿರುದ್ಧ ಧಿಕ್ಕಾರ ಕೂಗಿದರು. ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಬಡ ಕುಟುಂಬಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಮನೆಯ ಹಕ್ಕುಪತ್ರಗಳನ್ನು ನೀಡದೆ ಸತಾಯಿಸುತ್ತಿರುವ ಪುತ್ತೂರು ಶಾಸಕ ಅಶೋಕ್ ರೈ ಮತ್ತು ದಲಿತ ವಿರೋಧಿ ಸರ್ಕಾರದ ನಡೆ ಅತ್ಯಂತ ಖಂಡನೀಯ. ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಬಿಜೆಪಿ ಅವರ ಜೊತೆ ನಿಲ್ಲಲಿದೆ ಎಂದರು. ಸಿದ್ದರಾಮಯ್ಯ ಸರ್ಕಾರ ಮೂರು ವರ್ಷದ ಸಂಭ್ರಮಾಚರಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ಆಡಳಿತ ಸೌಧದ ಮುಂದೆ ಬಂದು ಕೈ ಚಾಚುವ ದಯನೀಯ ಸ್ಥಿತಿಗೆ ರಾಜ್ಯ ತಲುಪಿರುವುದು ಅತ್ಯಂತ ನಾಚಿಕೇಡು ಎಂದು ಸಂಸದರು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಪ್ರಮುಖರಾದ ಸುಲೋಚನಾ ಜಿ.ಕೆ. ಭಟ್, ಆರ್. ಚೆನ್ನಪ್ಪ ಕೋಟ್ಯಾನ್, ದಯಾನಂದ ಶೆಟ್ಟಿ ಉಜ್ರಿಮಾರ್, ಪಿ.ಬಿ. ಶಿವಕುಮಾರ್, ರಾಮದಾಸ್ ಬಂಟ್ವಾಳ, ವಿಕಾಸ್ ಪುತ್ತೂರು, ದೇವಪ್ಪ ಪೂಜಾರಿ, ಯಶೋಧರ ಕರ್ಬೆಟ್ಟು, ಹರೀಶ್ ಬಿಜತ್ರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

























