ನೂತನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಅವರ ಆಯ್ಕೆ ಬಹುತೇಕ ಖಚಿತವಾಗಿರುವ ಹಿನ್ನೆಲೆ ಕೆಪಿಸಿಸಿಗೂ ಹೊಸ ಸಾರಥಿಯ ನೇಮಕವಾಗಲಿದೆ. ಸಿಎಂ ಘೋಷಣೆಯ ಜೊತೆ ಜೊತೆಗೆ ಕೆಪಿಸಿಸಿಗೂ ನೂತನ ಅಧ್ಯಕ್ಷರನ್ನು ಹೈಕಮಾಂಡ್ ಘೋಷಿಸಲಿದ್ದು, ಸಿಎಂ ಮತ್ತು ಡಿಸಿಎಂ ಆಯ್ಕೆ ಆಧರಿಸಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಯಾರಿಗೆ ದಕ್ಕಲಿದೆ ಎಂಬುದು ನಿರ್ಧಾರವಾಗಲಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಈಗಾಗಲೇ ಸಚಿವ ಸತೀಶ್ ಜಾರಕಿಹೊಳಿ ಕಣ್ಣಿಟ್ಟಿದ್ದು, ಈ ಸಂಬಂಧ ಕೆಲ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಹೈಕಮಾಂಡ್ ಮನ್ನಣೆ ಯಾರಿಗೆ ಅನ್ನೋದನ್ನು ಕಾದುನೋಡಬೇಕಿದೆ.
ಸಿಎಂ ಬದಲಾವಣೆಯಿಂದ ಯಾವುದೇ ಸಮುದಾಯಗಳಿಗೂ ನೋವಾಗಂತೆ ನೋಡಿಕೊಳ್ಳುವ ಬಗ್ಗೆಯೂ ಹೈಕಮಾಂಡ್ ಪ್ಲ್ಯಾನ್ ರೂಪಿಸಿರುವ ಮಾಹಿತಿ. ನೂತನ ಮುಖ್ಯಮಂತ್ರಿಯ ಆಯ್ಕೆ ಜೊತೆಗೆ ನಾಲ್ವರಿಗೆ ಡಿಸಿಎಂ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ನಲ್ಲಿ ಚರ್ಚೆ ನಡೆದಿದೆ. ಜಾತಿ ಸಮೀಕರಣ ಆಧರಿಸಿ ನಾಲ್ವರಿಗೆ ಪ್ರಾತಿನಿಧ್ಯ ನೀಡುವ ಮಾತುಗಳು ಕೇಳಿಬಂದಿವೆ. ಒಬಿಸಿ, ದಲಿತ, ಮುಸ್ಲಿಂ ಅಥವಾ ಅಲ್ಪಸಂಖ್ಯಾತ ಮತ್ತು ಲಿಂಗಾಯತ ಕೋಟಾದಡಿಯಲ್ಲಿ ನಾಲ್ವರನ್ನು ಉಪಮುಖ್ಯಮಂತ್ರಿ ಮಾಡುವ ಬಗ್ಗೆ ವರಿಷ್ಠರು ಒಲವು ತೋರಿದ್ದಾರಂತೆ.
ದಲಿತ ಕೋಟಾದಲ್ಲಿ ಹಾಲಿ ಗೃಹ ಸಚಿವರಾಗಿರುವ ಪರಮೇಶ್ವರ್ ಅಥವಾ ಸಚಿವ ಪ್ರಿಯಾಂಕ್ ಖರ್ಗೆ ಡಿಸಿಎಂ ಆಗುವ ಸಾಧ್ಯತೆ ಇದ್ದರೆ, ಒಬಿಸಿ ಕೋಟಾದಲ್ಲಿ ಯತೀಂದ್ರಗೆ ಡಿಸಿಎಂ ಸ್ಥಾನ ಸಿಗಬಹುದು ಎನ್ನಲಾಗಿದೆ. ಇನ್ನು ಮುಸ್ಲಿಂ ಕೋಟಾದಲ್ಲಿ ಹಾಲಿ ಸಚಿವ ಜಮೀರ್ ಅಥವಾ ಸದ್ಯ ವಿಧಾನ ಸಭೆ ಸ್ಪೀಕರ್ ಆಗಿರುವ ಯು.ಟಿ. ಖಾದರ್ಗೆ ಹೈಕಮಾಂಡ್ ಮಣೆ ಹಾಕುವ ಸಾಧ್ಯತೆ ಇದೆ. ಲಿಂಗಾಯತ ಕೋಟಾದಲ್ಲಿ ಈಶ್ವರ್ ಖಂಡ್ರೆ ಮತ್ತು ಎಂ.ಬಿ.ಪಾಟೀಲ್ ರೇಸ್ನಲ್ಲಿದ್ದರೆ, ಅಲ್ಪಸಂಖ್ಯಾತ ಕೋಟಾದಲ್ಲಿ ಕೆ.ಜೆ.ಜಾರ್ಜ್ಗೆ ಡಿಸಿಎಂ ಸ್ಥಾನ ಸಿಗುವ ಬಗ್ಗೆ ಅಂದಾಜಿಸಲಾಗಿದೆ.

























