ಕೇರಳದ ಪ್ರಸಿದ್ಧ ಕೊಟ್ಟಿಯೂರು ಶಿವ ದೇವಸ್ಥಾನದಲ್ಲಿ ವೈಶಾಖ ಮಹೋತ್ಸವದ ವೇಳೆ ಕರ್ನಾಟಕದ ಭಕ್ತರ ಮೇಲೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭದ್ರತಾ ಸಿಬ್ಬಂದಿ ತೀವ್ರ ದೌರ್ಜನ್ಯ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ವಿಶೇಷವಾಗಿ ಮಹಿಳಾ ಭಕ್ತರನ್ನು ತಳ್ಳಾಡಿ, ಅವರ ಮೇಲೆ ಕಾಲಿನಿಂದ ನೀರು ಎರಚಿ ವಿಕೃತಿ ಮೆರೆದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕೊಟ್ಟಿಯೂರು ಶಿವ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ವೈಶಾಖ ಮಹೋತ್ಸವ ನಡೆಯುತ್ತದೆ. ಈ ವೇಳೆ ಮೇ ಅಥವಾ ಜೂನ್ ಒಂದು ತಿಂಗಳು ಮಾತ್ರ ಈ ದೇವಸ್ಥಾನ ತೆರೆದಿರುತ್ತದೆ. ವರ್ಷದ ಇನ್ನುಳಿದ ಕಾಲ ದೇವರ ದರ್ಶನವಿರುವುದಿಲ್ಲ. ಕಳೆದ ವರ್ಷ ಸೋಶಿಯಲ್ ಮೀಡಿಯಾ ರೀಲ್ಸ್ಗಳ ಮೂಲಕ ಈ ಕ್ಷೇತ್ರ ವೈರಲ್ ಆಗಿದ್ದರಿಂದ, ಈ ಬಾರಿ ಕರ್ನಾಟಕದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಕನ್ನಡಿಗರು ಬಸ್, ಕಾರುಗಳ ಮೂಲಕ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಅಲ್ಲಿ ಕನ್ನಡಿಗರಿಗೆ ಕನಿಷ್ಠ ಗೌರವವೂ ಸಿಗುತ್ತಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಅಳಲು ತೋಡಿಕೊಂಡಿದ್ದಾರೆ.
ಶಿವನ ದರ್ಶನಕ್ಕೆ 8 ರಿಂದ 10 ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ಇದ್ದು, ಇಲ್ಲಿ 1,000 ರೂಪಾಯಿ ಮುಖಬೆಲೆಯ ವಿಐಪಿ ಟಿಕೆಟ್ ಹೆಸರಿನಲ್ಲಿ ದೊಡ್ಡ ಸ್ಕ್ಯಾಮ್ ನಡೆಯುತ್ತಿದೆ. ಹಣ ಕೊಟ್ಟರೂ ಸರಿಯಾಗಿ ದರ್ಶನ ಭಾಗ್ಯ ಸಿಗುತ್ತಿಲ್ಲ. ಹೆಣ್ಣುಮಕ್ಕಳು ಗಂಟೆಗಟ್ಟಲೆ ಸಾಲಿನಲ್ಲಿ ನಿಂತಿದ್ದರೂ ಮುಂದೆ ಹೋಗಲು ಬಿಡದೆ, ಕೈ ಹಿಡಿದು ಕೆಟ್ಟದಾಗಿ ನೂಕುತ್ತಿದ್ದಾರೆ ಎಂದು ಕರ್ನಾಟಕದ ಭಕ್ತರು ಅಳಲು ತೋಡಿಕೊಂಡಿದ್ದಾರೆ. ಇದೇ ವೇಳೆ ದೇವಸ್ಥಾನದ ಸಿಬ್ಬಂದಿ ಮಹಿಳೆಯರ ಮೇಲೆ ಕಾಲಿನಿಂದ ನೀರು ಎರಚುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.
ಮಲಯಾಳಂ ಭಾಷೆ ಬಾರದ ಕನ್ನಡಿಗರನ್ನು ಗುರಿಯಾಗಿಸಿಕೊಂಡು ಅಲ್ಲಿನ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎಂದು ಭಕ್ತರು ಆಕ್ರೋಶ ಹೊರಹಾಕಿದ್ದಾರೆ. ಕೇರಳದ ಭಕ್ತರು ನಮ್ಮ ಧರ್ಮಸ್ಥಳ, ಉಡುಪಿಗೆ ಬಂದಾಗ ನಾವು ಅವರನ್ನು ಗೌರವದಿಂದ ನಡೆಸಿಕೊಳ್ಳುತ್ತೇವೆ. ಆದರೆ ಇಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಹೀಗಾಗಿ ಯಾರೂ ಕೊಟ್ಟಿಯೂರಿಗೆ ಬರಬೇಡಿ ಎಂದು ಅಲ್ಲಿಗೆ ಹೋಗಿರುವ ಭಕ್ತರೇ ವಿಡಿಯೋ ಮಾಡಿ ಕನ್ನಡಿಗರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ದರ್ಶನಕ್ಕೆ ವ್ಯವಸ್ಥಿತ ಮಾರ್ಗವಿಲ್ಲದೆ ಭಕ್ತರು ಗೇಟ್ ಬಳಿಯೇ ಪರದಾಡುವಂತಾಗಿದ್ದು, ತಮಗೆ ಬೇಕಾದವರನ್ನು ಮಾತ್ರ ಒಳಗೆ ಬಿಡಲಾಗುತ್ತಿದೆ ಎಂಬ ದೂರು ಕೇಳಿಬಂದಿದೆ. ದೇವರ ಸನ್ನಿಧಿಯಲ್ಲಿ ನಡೆದಿರುವ ಈ ಅಮಾನವೀಯ ವರ್ತನೆಗೆ ಕನ್ನಡಿಗರು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
























