ಚಿತ್ರದುರ್ಗ: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮೌಲ್ವಿ ಸೇರಿ ಇಬ್ಬರ ಬಂಧನವಾಗಿದೆ. ನಗರದಲ್ಲಿ ಮೇ 31 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಕುರಾನ್ ಪಠಿಸಲು ಹೋಗುತ್ತಿದ್ದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರಿಂದ ಮೌಲ್ವಿ ಮತ್ತು ಬಾಲಕಿಯ ಸಹೋದರನನ್ನು ಬಂಧಿಸಲಾಗಿದೆ.
ಮೌಲ್ವಿ ಅಬ್ದುಲ್ ರೆಹಮಾನ್, ಬಾಲಕಿ ಅಣ್ಣ ಬಂಧಿತ ಆರೋಪಿಗಳು. ಕಳೆದ ಮೂರು ವರ್ಷಗಳಿಂದ ಕುರಾನ್ ಪಠಿಸಲು ಮಸೀದಿಗೆ ಬಾಲಕಿ ಹೋಗುತ್ತಿದ್ದಳು. ಮೊದಲು ಬಾಲಕಿಗೆ ಗಾಳಿ ಸೋಕಿದೆ ಪೂಜೆ ಮಾಡಬೇಕು ಎಂದು ಹಜರತ್ ಮೌಲ್ವಿ ಹೇಳಿದ್ದ. ನಂತರ ಮಸೀದಿಯಲ್ಲಿ ಪೂಜೆ ಬೇಡ ಅಂತ ಬಾಲಕಿಯ ಮನೆಯಲ್ಲೇ ಪೂಜೆ ನಡೆಸಲು ತಿಳಿಸಿದ್ದ. ಬಾಲಕಿಗೆ ದೆವ್ವ ಮೆಟ್ಟಿದೆ, ದೈಹಿಕ ಸುಖ ಕೊಟ್ರೆ ದೂರವಾಗುತ್ತೆ ಎಂದು ನಂಬಿಸಿ ಬಾಲಕಿ ಸಹೋದರನಿಗೂ ಲೈಂಗಿಕ ದೌರ್ಜನ್ಯ ಮಾಡುವಂತೆ ಮೌಲ್ವಿ ಪ್ರೇರಣೆ ನೀಡಿದ್ದಾನೆ. ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಚಿತ್ರದುರ್ಗ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಮಾತನಾಡಿ, ಬಾಲಕಿ ಮೇಲೆ ಮೌಲ್ವಿಯಿಂದ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಈ ಕುರಿತು ಆಸ್ಪತ್ರೆಯಿಂದ ಮಹಿಳಾ ಠಾಣೆಗೆ ಮಾಹಿತಿ ಸಿಕ್ಕಿದೆ. ಮಹಿಳಾ ಠಾಣೆ ಪೊಲೀಸರಿಂದ ಎಫ್ಐಆರ್ ದಾಖಲಾಗಿದೆ. ಪಾಠ ಹೇಳಲು ಬರುತ್ತಿದ್ದ ಮೌಲ್ವಿ ಪೂಜೆ ನೆಪಪೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಾಲಕಿಗೆ ಆರೋಗ್ಯ ಸಮಸ್ಯೆ ಇದೆ ಅಂತ ನೆಪ ಹೇಳಿ ಲೈಂಗಿಕ ಕಿರುಕುಳ ನೀಡಲಾಗಿದೆ. ಮೌಲ್ವಿಯಿಂದ ಬಾಲಕಿಯ ಸಹೋದರನ ಬ್ರೇನ್ ವಾಶ್ ಮಾಡಿದ್ದು, ಆತನಿಗೂ ಲೈಂಗಿಕ ದೌರ್ಜನ್ಯ ಎಸಗುವಂತೆ ಪ್ರೇರಣೆ ನೀಡಲಾಗಿದೆ. ಬಾಲಕಿಯ ತಾಯಿ ಈ ಕುರಿತು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದರಿಂದ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿ ಮೌಲ್ವಿ ಅಬ್ದುಲ್ ರೆಹಮಾನ್, ಬಾಲಕಿ ಸಹೋದರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.