ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯ ಡಾ. ಸಿಎನ್ ಮಂಜುನಾಥ್ ಅವರು 1 ಲಕ್ಷ ಮತಗಳ ಅಂತರದಲ್ಲಿ ಗೆಲುವಿನತ್ತ ಮುನ್ನಡೆದಿದ್ದಾರೆ. ಒಂಬತ್ತು ಸುತ್ತುಗಳ ಮತ ಎಣಿಕೆ ಮುಗಿದ ನಂತರ 1 ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರವನ್ನು ಎದುರಾಳಿ ಕಾಂಗ್ರೆಸ್ನ ಡಿ.ಕೆ ಸುರೇಶ್ ಅವರಿಂದ ಮಂಜುನಾಥ್ ಕಾಯ್ದುಕೊಂಡರು. ಈ ಸಂದರ್ಭದಲ್ಲಿ ವಿಸ್ತಾರ ನ್ಯೂಸ್ ಜೊತೆಗೆ ಮಾತನಾಡಿದ ಮಂಜುನಾಥ್, “ಜನ ಮತಗಳ ಜೊತೆಗೆ ತಮ್ಮ ಹೃದಯವನ್ನೂ ನನಗೆ ನೀಡಿದ್ದಾರೆ” ಎಂದು ಹೇಳಿದ್ದಾರೆ.
ತಮ್ಮನ್ನು ಗೆಲುವಿನತ್ತ ಕೊಂಡೊಯ್ದ ಬೆಂಗಳೂರು ಗ್ರಾಮಾಂತರದ ಮತದಾರರಿಗೆ ಡಾ. ಮಂಜುನಾಥ್ ಧನ್ಯವಾದ ಸಮರ್ಪಿಸಿದ್ದಾರೆ. ತಮ್ಮ ಗೆಲುವಿನ ಹಿಂದೆ ನಿಂತ ಬಿಜೆಪಿಯ ರಾಷ್ಟ್ರೀಯ ಹಾಗೂ ಸ್ಥಳಿಯ ಮುಖಂಡರು, ಜೊತೆಗೆ ದುಡಿದ ಜೆಡಿಎಸ್ನ ನಾಯಕರು ಹಾಗೂ ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಿಸಿದ್ದಾರೆ.
“ಚುನಾವಣೆ ಹಬ್ಬದ ರೀತಿಯಲ್ಲಿ ಚುನಾವಣೆ ನಡೆಯಿತು. ಜನಶಕ್ತಿಯೇ ಪ್ರಜಾಪ್ರಭುತ್ವದಲ್ಲಿ ಅತ್ಯಂತ ದೊಡ್ಡ ಶಕ್ತಿ ಎಂಬುದನ್ನು ಕ್ಷೇತ್ರದ ಜನತೆ ತೋರಿಸಿದ್ದಾರೆ. ಜನರ ಬಾಯಲ್ಲಿ ನಮ್ಮ ಹೆಸರಿತ್ತು. ಬಾಯಿಯಲ್ಲಿದ್ದ ಹೆಸರು ಬ್ಯಾಲೆಟ್ಗೆ ಬಂತು” ಎಂದು ಮಂಜುನಾಥ್ ಹರ್ಷ ವ್ಯಕ್ತಪಡಿಸಿದರು.
“ಹೆಂಡತಿ ಮಕ್ಕಳು ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ, ಇದು ನಮಗಲ್ಲ ಅನ್ನುತ್ತಾ ಇದ್ದರು. ಆಮೇಲೆ ಚುನಾವಣೆ ಪ್ರಚಾರದ ಪ್ರಕ್ರಿಯವಾಗಿ ಅವರೂ ಪಾಲ್ಗೊಂಡರು, ಓಡಾಡಿದರು. ಜನರ ಪ್ರೀತಿ ಅಭಿಮಾನಕ್ಕೆ ಬೆಲೆ ಕಟ್ಟುವುದಕ್ಕಾಗುವುದಿಲ್ಲ” ಎಂದು ಅವರು ನುಡಿದರು.
“ಎಲ್ಲ ಕ್ಷೇತ್ರಗಳಲ್ಲಿ ಆರೋಗ್ಯ, ಶಿಕ್ಷಣ, ಕೃಷಿ, ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಬೇಕು. ಚುನಾವಣೆ ನಂತರ ಘರ್ಷಣೆ ಆಗಬಾರದು, ಅದೂ ಕೂಡ ಅಭಿವೃದ್ಧಿಯೇ. ಜನರ ಮಾನಸಿಕ ನೆಮ್ಮದಿಯ ಜೀವನ ಮುಖ್ಯ. ಜನ ಸಂತೃಪ್ತಿಯಿಂದ ಇರಬೇಕು. ಬೆಂಗಳೂರಿನಲ್ಲಿ ನಿಮ್ಹಾನ್ಸ್ ಆರಂಭವಾದಾಗ ಜನಸಂಖ್ಯೆ ಕಡಿಮೆ ಇತ್ತು. ಈಗ ದುಪ್ಪಟ್ಟು ಆಗಿದೆ. ನರರೋಗ ಚಿಕಿತ್ಸೆ ಕೇಂದ್ರದ ಇನ್ನೊಂದು ಶಾಖೆ ತೆರೆಯಬೇಕಿದೆ. ರಸ್ತೆ ಟ್ರಾಫಿಕ್ನಲ್ಲಿ ಶೇ.20 ಮರಣ ಆಗುತ್ತಿದೆ. ಪ್ರತಿ 125 ಕಿಮೀಗೆ ಒಂದು ಕ್ರಿಟಿಕಲ್ ಕೇರ್ ಕ್ಲಿನಿಕ್ ಆಗಬೇಕು. ಹೃದಯಾಘಾತ, ಬ್ರೇನ್ ಸ್ಟ್ರೋಕ್ಗೆ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಸಿಗಬೇಕು” ಎಂದು ಮಂಜುನಾಥ್ ತಮ್ಮ ಕನಸುಗಳನ್ನು ಹಂಚಿಕೊಂಡರು. “ರಾಮನಗರದಲ್ಲಿ ರೇಷ್ಮೆ ಬೆಳೆಗಾರಿಕೆ ಆಧುನೀಕರಣ, ಅಂತಾರಾಷ್ಟ್ರೀಯ ಮಾರುಕಟ್ಟೆ ಸೃಷ್ಟಿಸಬೇಕು. ಬೆಂಗಳೂರು ಮೆಟ್ರೋ ಹಾರೋಹಳ್ಳಿ ವರೆಗೆ ವಿಸ್ತರಣೆ ಆಗಬೇಕು. ಬೆಂಗಳೂರಿನಲ್ಲಿ ಕೆರೆಗಳ ರಕ್ಷಣೆಗೆ ತಜ್ಞರ ಸಮಿತಿ ಆಗಬೇಕು. ಮಳೆನೀರು ಕೊಯ್ಲು, ಪ್ರವಾಹ ನಿಯಂತ್ರಣಕ್ಕೆ ವ್ಯವಸ್ಥೆ ಆಗಬೇಕು” ಎಂದು ಅವರು ತಿಳಿಸಿದರು.
“ಮಂಜುನಾಥ್ ಅವರನ್ನು ಬಿಜೆಪಿ ʼಬಲಿಪಶುʼ ಮಾಡುತ್ತಿದೆ ಎಂಬ ಎದುರಾಳಿಗಳ ಮಾತಿಗೆ ನಾನು ಅಂದೂ ಉತ್ತರ ಕೊಡಲಿಲ್ಲ, ಈಗಲೂ ಉತ್ತರ ಕೊಡುವುದಿಲ್ಲ. ಜನರೇ ಉತ್ತರ ಕೊಟ್ಟಿದ್ದಾರೆ” ಎಂದು ಅವರು ನುಡಿದರು