ಮುಂದಿನ 9 ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಫಲಿತಾಂಶ ಬಿಜೆಪಿ ಪರವಾದರೆ ಮಾತ್ರ ಕೇಂದ್ರದಲ್ಲಿ ಎನ್ಡಿಎ ಅಧಿಕಾರದಲ್ಲಿ ಉಳಿಯುತ್ತದೆ ಎಂದು ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಪ್ರಸ್ತುತ ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಜನಪ್ರಿಯತೆ ಮತ್ತು ಶಕ್ತಿ ಕಡಿಮೆಯಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಮುಂದಿನ ಎರಡೂವರೆ ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರ, ದೆಹಲಿ, ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಬಿಹಾರ ಸೇರಿದಂತೆ 9 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ರಾಜ್ಯಗಳ ಫಲಿತಾಂಶದ ಮೇಲೆ ಬಿಜೆಪಿಯ ದೀರ್ಘಾಯುಷ್ಯವು ಅವಲಂಬಿತವಾಗಿದೆ ಎಂದರು.
ಫಲಿತಾಂಶಗಳು ಬಿಜೆಪಿ ವಿರುದ್ಧವಾಗಿದ್ದರೆ ಸರ್ಕಾರದ ಸ್ಥಿರತೆಯ ಬಗ್ಗೆ ಖಂಡಿತವಾಗಿಯೂ ಪ್ರಶ್ನೆಗಳು ಏಳುತ್ತವೆ. ಈ ರಾಜ್ಯಗಳಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಿದರೆ, ಅದರ ಅಧಿಕಾರ ಉಳಿಯುತ್ತದೆ ಎಂದರು. ಬಿಹಾರದಲ್ಲಿ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವುದು ಬಿಜೆಪಿಯ ಅನಿವಾರ್ಯತೆಯಾಗಿದೆ. ನಿತೀಶ್ ಇದ್ದರೆ ನಾವು ಬಿಹಾರ ಗೆಲ್ಲಲು ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಿದೆ. ಆದರೆ ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಉಳಿಯಬೇಕಾದರೆ ನಿತೀಶ್ ಕುಮಾರ್ ಅವರ ಸಹಾಯ ಬೇಕು. ಆಗಾಗಿ ಬಿಹಾರದಲ್ಲಿ ಬಿಜೆಪಿ ಏನೂ ಮಾಡಲು ಆಗುತ್ತಿಲ್ಲ ಎಂದರು. ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದರು.