ಉಪ್ಪಿನಂಗಡಿ: ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದೇ ದಾಖಲಾಗಿದ್ದ 1857 ರ ಹೋರಾಟಕ್ಕಿಂತ 20 ವರ್ಷ ಮೊದಲೇ ಅಂದರೆ 1837 ರಲ್ಲಿ ಬ್ರಿಟೀಷರ ವಿರುದ್ದ ಹೋರಾಟ ನಡೆಸಿ ಹುತಾತ್ಮರಾದ ಉಪ್ಪಿನಂಗಡಿಯ ಮಂಜ ಬೈದ್ಯ ರವರ ದೇಶಪ್ರೇಮ ಭರಿತ ಹೋರಾಟ 190 ವರ್ಷಗಳ ಬಳಿಕ ಮುನ್ನಲೆಗೆ ಬರುವಂತಾಗಿರುವುದು ವಿಶೇಷ. ಆದರೂ ಅವರ ಹೆಸರನ್ನು ಶಾಶ್ವತಗೊಳಿಸುವ ಕಾರ್ಯದತ್ತ ಚಿತ್ತವಿರಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವೆಂದು ಸಂಸದ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಉಪ್ಪಿನಂಗಡಿಯ ನೇತ್ರಾವತಿ ಸಭಾ ಭವನದಲ್ಲಿ ಮೇ.27ರಂದು ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿ ಮತ್ತು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ಇವುಗಳ ಆಶ್ರಯದಲ್ಲಿ ನಡೆದ ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹಿರಿಯರು ಮಾಡಿದ ತ್ಯಾಗ ಬಲಿದಾನಗಳನ್ನು ನೆನಪಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು, ಮಂಜ ಬೈದ್ಯರ ಸಂಸ್ಮರಣೆ ಮಾಡುವ ಈ ದಿನ ನಮ್ಮೆಲ್ಲರ ಬದುಕಿನ ಸಾರ್ಥಕ್ಯ ಕ್ಷಣವಾಗಿದೆ. ಮಂಜ ಬೈದ್ಯರ ನೆನಪನ್ನು ಈ ಸಮಾಜದಲ್ಲಿ ಶಾಶ್ವತವಾಗಿ ಅಮರವಾಗಿಸಲು ಸರಕಾರದ ನೆಲೆಯಲ್ಲಿ ಏನು ಮಾಡಬಹುದೆಂದು ನಾನು ಹಾಗೂ ಮಂಗಳೂರು ಸಂಸದರಾದ ಬ್ರಿಜೇಶ್ ಚೌಟರು ಚರ್ಚಿಸಿ ಅದಕ್ಕೆ ಪೂರಕವಾದ ಕೆಲಸವನ್ನು ಮಾಡುತ್ತೇವೆ ಎಂದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ಬ್ರಿಟೀಷರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಮಂಜ ಬೈದ್ಯರವರು ಅಪ್ರತಿಮ ಕ್ರಾಂತಿವೀರ. ನಮ್ಮ ಸಮಾಜದವರನ್ನು ಬ್ರಿಟೀಷರ ಕಪಿ ಮುಷ್ಠಿಯಿಂದ ಪಾರು ಮಾಡಬೇಕೆಂದು ಕನಸು ಕಂಡಿದ್ದ ಅವರು ಅದಕ್ಕಾಗಿ ಪ್ರಾಣ ತ್ಯಾಗ ಮಾಡಬೇಕಾಗಿ ಬಂದಿತ್ತು. ಅವರ ನೆನಪು ಅಜಾರಾಮರ ಆಗಿ ಉಳಿಯಬೇಕು. ಮಂಜ ಬೈದ್ಯ ಸಂಸ್ಮರಣಾ ಸಮಿತಿಯವರು ಈಗಾಗಲೇ ಇದಕ್ಕಾಗಿ ಹಲವಾರು ಬೇಡಿಕೆಗಳನ್ನು ಮುಂದಿರಿಸಿದ್ದು, ತನ್ನ ಕ್ಷೇತ್ರವಾದ ಕಲ್ಲೇರಿಯಲ್ಲಿ ವೃತ್ತ ರಚಿಸಿ ಅದಕ್ಕೆ ಮಂಜು ಬೈದ್ಯರ ನಾಮಕರಣ ಮಾಡಬೇಕೆನ್ನುವ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಶಾಸಕನ ನೆಲೆಯಲ್ಲಿ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ಬೆಳ್ತಂಗಡಿ ತಾಲೂಕಿನಲ್ಲಿ ಸರಕಾರಿ ಕಟ್ಟಡವೊಂದಕ್ಕೆ ಮಂಜು ಬೈದ್ಯರ ಹೆಸರಿಡುವ ಕಾರ್ಯಕ್ಕೆ ನಿಮ್ಮೆಲ್ಲರ ಸಲಹೆ ಪಡೆದು ಮುಂದುವರಿಯುತ್ತೇನೆ. ಇದರೊಂದಿಗೆ ಅವರ ಮೂಲ ಮನೆಯ ಬಳಿಯು ಸ್ಮಾರಕ ನಿರ್ಮಾಣ ಮಾಡುವ ಬಗ್ಗೆ ಹಾಗೂ ಅವರ ತತ್ತ್ವಾದರ್ಶಗಳನ್ನು ಉಳಿಸುವ ಕಾರ್ಯವಾಗಬೇಕಿದೆ. ಇದಕ್ಕೂ ನಾನು ನನ್ನಿಂದಾದ ಸಹಕಾರ ನೀಡುತ್ತೇನೆ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ನಮ್ಮ ಹಿರಿಯರು ಮಾಡಿದ ತ್ಯಾಗ- ಬಲಿದಾನಗಳಿಂದ ನಾವಿಂದು ಸ್ವಾತಂತ್ರ್ಯದ ಸವಿ ಅನುಭವಿಸುವಂತಾಗಿದೆ. ಮಂಜ ಬೈದ್ಯರು ಸೇರಿದಂತೆ ಇಂತಹ ಕ್ರಾಂತಿಕಾರಿ ಹೋರಾಟಗಾರರಂತೆ ಅಂದು ಇಡೀ ದೇಶವೇ ಒಂದಾಗುತ್ತಿದ್ದರೆ ಬ್ರಿಟೀಷರು ನಮ್ಮನ್ನು ಆಳ್ವಿಕೆ ಮಾಡಲು ಸಾಧ್ಯವಿರುತ್ತಿರಲಿಲ್ಲ. ಮಂಜ ಬೈದ್ಯರ ಬಲಿದಾನ ಮುನ್ನಲೆಗೆ ಬರಲು 190 ವರ್ಷಗಳು ಬೇಕಾಯಿತು. ಆದರೂ ಅವರ ತ್ಯಾಗ- ಬಲಿದಾನಗಳನ್ನು ಶಾಶ್ವತವಾಗಿ ನೆನಪಿಸುವ ಸಲುವಾಗಿ ಹಲವು ಯೋಜನೆಗಳು ಅನುಷ್ಠಾನವಾಗಬೇಕಿದೆ. ಇದಕ್ಕಾಗಿ ನಾವೆಲ್ಲರೂ ಒಂದಾಗಿ ಕೆಲಸ ಮಾಡೋಣ ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಮಂಜು ಬೈದ್ಯರಂತಹ ರೈತನ ಮಗನೋರ್ವನ ಹೋರಾಟ ಇತಿಹಾಸ ಪುಟಗಳಲ್ಲಿ ದಾಖಲಾಗದಂತಹ ಹುನ್ನಾರ ಅಂದು ನಡೆದಿರಬಹುದು. ಅವರ ಹೋರಾಟ ದಂಗೆ ಅಲ್ಲ. ಅದು ಸ್ವಾಭಿಮಾನದ ಹೋರಾಟ. ಯುವಕರಲ್ಲಿನ ದೇಶಾಭಿಮಾನದಿಂದಾಗಿ ಅವರ ಅಂದಿನ ಹೋರಾಟ ಇಂದು ಮುನ್ನಲೆಗೆ ಬಂದಿದೆ. ಸುಳ್ಳು ಇತಿಹಾಸವನ್ನು ತಿರುಚಿ ನೈಜ ಇತಿಹಾಸವನ್ನು ದಾಖಲಿಸುವ ಕೆಲಸ ನಮ್ಮೆಲ್ಲರಿಂದಾಗಬೇಕು. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ, ದ.ಕ. ಜಿಲ್ಲಾಧಿಕಾರಿ ಕಚೇರಿಗೆ ಮಂಜ ಬೈದ್ಯರ ಹೆಸರಿಡುವ ಕೆಲಸವಾಗಬೇಕು. ಈ ಮೂಲಕ ಅಂದಿನ ರೈತ ಹೋರಾಟದ ನೆನಪನ್ನು ಅಜಾರಾಮರವಾಗಿಸುವ ಕೆಲಸವಾಗಬೇಕು ಎಂದರು.
ಪತ್ರಕರ್ತ ಉದಯಕುಮಾರ್ ಮಂಜ ಬೈದ್ಯರ ಬಗ್ಗೆ ಅಧ್ಯಯನ ವರದಿ ಮಂಡಿಸಿದರು. ವೈದ್ಯ ಡಾ. ಸುಪ್ರೀತ್ ಲೋಬೋ, ಪುತ್ತೂರು ತಾಲೂಕು ಅಕ್ರಮ- ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಅಝೀಝ್ ಬಸ್ತಿಕ್ಕಾರ್ ಮಾತನಾಡಿ, 1837ರಲ್ಲಿ ಅಂದಿನ ತಾಲೂಕು ಕೇಂದ್ರವಾಗಿದ್ದ ಉಪ್ಪಿನಂಗಡಿಯ ಖಜಾನೆಯಲ್ಲಿ ಗುಮಾಸ್ತರಾಗಿದ್ದ ಮಂಜ ಬೈದ್ಯ ಬ್ರಿಟೀಷ್ ಕಂಪೆನಿ ಸರಕಾರದ ಅಮಾನುಷ ನಡೆಗಳನ್ನು ಸಹಿಸಲಾರದೆ, ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಖಜಾನೆಯ ಅಧಿಕಾರಿಗಳನ್ನು ಕಟ್ಟಿ ಹಾಕಿ ಖಜಾನೆಯಲ್ಲಿನ ಧನಕನಕಗಳನ್ನು ಬಾಚಿಕೊಂಡು ಆ ವೇಳೆ ಬ್ರಿಟೀಷರ ವಿರುದ್ದ ಹೋರಾಟ ನಡೆಸುತ್ತಿದ್ದ ಕಲ್ಯಾಣಸ್ವಾಮಿಗೆ ನೀಡಿ 13 ದಿನಗಳ ಕಾಲ ತುಳುನಾಡನ್ನು ಬ್ರಿಟೀಷರಿಂದ ಮುಕ್ತಗೊಳಿಸಿರುವುದು ಇತಿಹಾಸ. ಬಳಿಕ ಬ್ರಿಟೀಷರಿಗೆ ಸೆರೆ ಸಿಕ್ಕಿ 1837 ಮೇ 27 ರಂದು ಮಂಗಳೂರಿನ ಬಿಕರ್ಣಕಟ್ಟೆಯಲ್ಲಿ ನೇಣುಗಂಬವನ್ನೇರುವ ಮೂಲಕ ತಾಯ್ನಾಡ ದಾಸ್ಯ ಮುಕ್ತಿಗಾಗಿ ಬಲಿದಾನಗೈದ ಮಂಜು ಬೈದ್ಯರ ಹೋರಾಟ ಇತಿಹಾಸದಲ್ಲಿ ಪುಟದಲ್ಲಿ ಮರೆಯಾಗಿದ್ದ ಬಗ್ಗೆ ಹಾಗೂ ಮತ್ತೆ 190 ವರ್ಷಗಳ ಬಳಿಕ ಅವರ ತ್ಯಾಗ ಮುನ್ನಲೆಗೆ ಬಂದ ಬಗ್ಗೆ ವಿಚಾರ ಮಂಡಿಸಿದರು.
ವಂದೇ ಮಾತರಂ ಹಾಡಿನೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್ ಗಣ್ಯರ ಸಮ್ಮುಖದಲ್ಲಿ ದೀಪ ಬೆಳಗಿಸಿ, ಮಂಜ ಬೈದ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ದಡ್ಡು, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪುತ್ತೂರು ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಬಿಎಸ್ಸೆಫ್ನ ನಿವೃತ ಕಮಾಂಡೇಂಟ್ ಚಂದಪ್ಪ ಮೂಲ್ಯ, ಪ್ರಮುಖರಾದ ಪದ್ಮರಾಜ್ ಆರ್. ಪೂಜಾರಿ, ಜಯವಿಕ್ರಮ್ ಕಲ್ಲಾಪು, ಕೃಷ್ಣರಾವ್ ಆರ್ತಿಲ, ಆರ್.ಸಿ. ನಾರಾಯಣ, ಕರುಣಾಕರ ಸುವರ್ಣ, ರಾಮಚಂದ್ರ ಪೂಜಾರಿ, ಅಜಿತ್ ಕುಮಾರ್ ಪಾಲೇರಿ, ಮುರಳೀಧರ್ ರೈ ಮಠಂತಬೆಟ್ಟು, ಅಪ್ಪಯ್ಯ ಮಣಿಯಾಣಿ, ಶಯನಾ ಜಯಾನಂದ, ರಾಮಚಂದ್ರ ಮಣಿಯಾಣಿ,
ಪ್ರಸನ್ನ ದರ್ಬೆ, ಶೇಖರ ಗೌಂಡತ್ತಿಗೆ, ಪ್ರಸಾದ್ ಕೌಶಲ್ ಶೆಟ್ಟಿ, ವಿದ್ಯಾಧರ ಜೈನ್, ಸುಧಾಕರ ಶೆಟ್ಟಿ, ಮುಕುಂದ ಬಜತ್ತೂರು, ಎನ್. ಉಮೇಶ್ ಶೆಣೈ ವರದರಾಜ್, ಪ್ರಕಾಶ್ ರೈ ಬೆಳ್ಳಿಪ್ಪಾಡಿ, ಹರಿರಾಮಚಂದ್ರ, ಸಂಜೀವ ಪೂಜಾರಿ, ಎಲ್ಯಣ್ಣ ಪೂಜಾರಿ, ಸಾಜ ರಾಧಾಕೃಷ್ಣ ಆಳ್ವ, ಯು.ಜಿ. ರಾಧಾ, ಪುರುಷೋತ್ತಮ ಮುಂಗ್ಲಿಮನೆ, ದಿನೇಶ್ ರೈ, ಜಯಪ್ರಕಾಶ್ ಬದಿನಾರು, ಡಾ. ರಮ್ಯ ರಾಜಾರಾಮ್ , ವಂದನಾ ಶರತ್ , ಉಷಾ ಮುಳಿಯ, ಕೈಲಾರು ರಾಜಗೋಪಾಲ ಭಟ್, ಗಂಗಾಧರ ಗೌಡ ನೆಕ್ಕರಾಜೆ, ಅನಿಲ್ ದಡ್ಡು, ಜಯಾನಂದ ಕಲ್ಲಾಪು, ಸುನಿಲ್ ಅನಾವು, ಯು. ರಾಮ, ಸುಂದರ ಶೆಟ್ಟಿ ಎಂಜಿರಪಳಿಕೆ ಹಾಗೂ ಮಂಜ ಬೈದ್ಯರ ವಂಶಸ್ಥರಾದ ಜನಾರ್ದನ, ವಿಮಲಾ ತೇಜಾಕ್ಷಿ, ವೆಂಕಪ್ಪ ಪೂಜಾರಿ ಮರುವೇಲು, ವಸಂತ ಕುಕ್ಕುಜೆ ಮತ್ತಿತರರು ಉಪಸ್ಥಿತರಿದ್ದರು.
ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀರಾಮ ಶಾಲೆಯಲ್ಲಿ ಹೊಸದಾಗಿ ನಿರ್ಮಿಸಲಾದ ಕ್ರೀಡಾಂಗಣಕ್ಕೆ ಉಪ್ಪಿನಂಗಡಿಯ ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರ ಮಂಜ ಬೈದ್ಯರ ಹೆಸರನ್ನು ಇಡುವ ಬಗ್ಗೆ ಶಾಲಾ ಆಡಳಿತವು ನಿರ್ಣಯವನ್ನು ಕೈಗೊಂಡಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದಾಗ ಕರತಾಂಡನದ ಬೆಂಬಲ ವ್ಯಕ್ತವಾಯಿತು.

























