ಪುತ್ತೂರು: ಮಾಣಿಲ ಗ್ರಾಮದ ಕಾಮಜಾಲು- ಪೂವನಡ್ಕದಲ್ಲಿರುವ ಸಿರಿಯ ನದಿಗೆ ಸೇತುವೆ ನಿರ್ಮಾಣ ಆಗಬೇಕೆಂಬುದು ಈ ಭಾಗದ ಹಾಗೂ ಕೇರಳಕ್ಕೆ ಸೇರಿದ ಗ್ರಾಮಸ್ಥರ ಬಹುಕಾಲದ ಕನಸಾಗಿತ್ತು, ಈ ಕನಸನ್ನು ನನಸು ಮಾಡುವುದಾಗಿ ಅನೇಕ ಜನಪ್ರತಿನಿಧಿಗಳು ಭರವಸೆ ನೀಡಿದ್ದರು. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಶೋಕ್ ರೈ ಕೂಡಾ ಸೇತುವೆ ನಿರ್ಮಾಣದ ಭರವಸೆ ನೀಡಿದ್ದರು. ಅಶೋಕ್ ರೈ ಮಾತುಕೊಟ್ಟು 2 ವರ್ಷದಲ್ಲೇ ಅದನ್ನು ಪೂರ್ಣಗೊಳಿಸಿದ್ದಾರೆ. ಸಿರಿಯ ನದಿಗೆ ಸೇತುವೆ ನಿರ್ಮಾಣಕ್ಕೆ 20 ಕೋಟಿ ಅನುದಾನ ಮಂಜೂರಾಗಿದೆ.
ಸಿರಿಯ ನದಿ ಕೇರಳ ಹಾಗೂ ಕರ್ನಾಟಕದ ಸಂಪರ್ಕ ಸೇತುವಾಗಲಿದೆ. ಕರ್ನಾಟಕಕ್ಕೆ ಸೇರಿದ ಮಾಣಿಲ, ವಿಟ್ಲ ಭಾಗದ ಜನರು ನದಿಯ ಆಚೆ ದಡದಲ್ಲಿರುವ ಗ್ರಾಮಕ್ಕೆ ಭೇಟಿಯಾಗಬೇಕಾದಲ್ಲಿ 14 ಕಿ ಮೀ ಕ್ರಯಿಸಬೇಕಿತ್ತು. ಮಾಣಿಲದಿಂದ ಕಾಸರಗೋಡು ಜಿಲ್ಲೆಯ ಪೆರ್ಲಕ್ಕೆ ಅತೀ ಹತ್ತಿರವಿದೆ ಆದರೆ ದಾರಿ ಮಾತ್ರ ದೂರವಾಗಿತ್ತು. ಇಲ್ಲಿನ ನದಿಗೆ ಸೇತುವೆ ನಿರ್ಮಾಣ ಮಾಡಿ ಎಂದು ಎರಡೂ ರಾಜ್ಯದ ಜನತೆ ಯಾರಿಗೆಲ್ಲಾ ಮನವಿ ಕೊಡಬೇಕೋ ಅವರನ್ನೆಲ್ಲಾ ಹುಡುಕಿ ಮನವಿಯನ್ನು ನೀಡಿ ಸೇತುವೆಯ ನಿರ್ಮಾಣಕ್ಕೆ ಸಹಕರಿಸಿ ಎಂದು ಕಳೆದ 30 ವರ್ಷಗಳಿಂದ ಮನವಿ ಮಾಡುತ್ತಲೇ ಇದ್ದಾರೆ. ಈ ವರ್ಷ ಆಗಬಹುದು , ಮುಂದಿನ ವರ್ಷ ಆಗಬಹುದು, ಅವರು ಖಂಡಿತಾ ಮಾಡಿಯೇ ಮಾಡುತ್ತಾರೆ ಎಂದು ನಂಬಿದ್ದ ಜನತೆಗೆ ತಮ್ಮ ಬೇಡಿಕೆ ಈಡೇರಿಸಲು ಸಾಧ್ಯವೇ ಆಗಿರಲಿಲ್ಲ. ಇಲ್ಲಿ ಸೇತುವೆ ನಿರ್ಮಾಣಕ್ಕೆ ಇಚ್ಚಾಶಕ್ತಿಯ ಕೊರತೆಯೇ ಎದ್ದು ಕಾಣುತ್ತಿತ್ತು.
ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಮಾಣಿಲ ಗ್ರಾಮಕ್ಕೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಅಶೋಕ್ ರೈ ಅವರಲ್ಲಿ ಈ ಗ್ರಾಮಸ್ಥರು ಸೇತುವೆಯ ಬೇಡಿಕೆ ಇಟ್ಟಿದ್ದರು. ನನ್ನನ್ನು ಗೆಲ್ಲಿಸಿ ನಾನು ಗೆದ್ದರೆ ಖಂಡಿತವಾಗಿಯೂ ನಿಮ್ಮ ಬೇಡಿಕೆಯನ್ನು ಈಡೇರಿಸುವೆ ಎಂದು ಚುನಾವಣಾ ಸಂದರ್ಭದಲ್ಲಿ ಮಾತುಕೊಟ್ಟಿದ್ದರು. ಮನವಿ ನೀಡಿ , ಭರವಸೆ ನಂಬಿ ಸೋತು ಹೋಗಿದ್ದ ಮಾಣಿಲ ಗ್ರಾಮಸ್ಥರ ಭರವಸೆ ಪಟ್ಟಿಗೆ ಅಶೋಕ್ ರೈ ಭರವಸೆಯೂ ಸೇರಿತ್ತು.
ಅಶೋಕ್ ರೈ ಅವರು ಚುನಾವಣೆಯಲ್ಲಿ ಗೆದ್ದ ಕೆಲವೇ ತಿಂಗಳಲ್ಲಿ ಸಿರಿಯ ನದಿಗೆ ಸೇತುವೆ ನಿರ್ಮಾಣ ಮಾಡುವ ಬಗ್ಗೆ ಹಾಗೂ ಇದರ ಸಾಧಕ ಬಾಧಕಗಳ ಬಗ್ಗೆ ಸರ್ವೆಯನ್ನು ಮಾಡಿಸಿದ್ದರು. ಸೇತುವೆ ನಿರ್ಮಾಣ ಖಂಡಿತಾ ಮಾಡುತ್ತೇನೆ ಎಂದು ಶಾಸಕರಾದ ಬಳಿಕ ಮತ್ತೆ ಭರವಸೆ ನೀಡಿದ್ದರು. ಶಾಸಕರಾಗಿ ಎರಡು ವರ್ಷ ಕಳೆದ ಸಂದರ್ಭದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಸರಕಾರದ ಮೇಲೆ ಒತ್ತಡ ಹಾಕಿ ೨೦ ಕೋಟಿ ಮಂಜೂರು ಮಾಡಿಸಿದ್ದಾರೆ.
ಕಳೆದ ಮಾ. ೨೮ ರಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರನ್ನು ಮಾಣಿಲಕ್ಕೆ ಕರೆದುಕೊಂಡು ಬಂದಿದ್ದ ಶಾಸಕ ಅಶೋಕ್ ರೈ, ಸೇತುವೆ ನಿರ್ಮಾಣವಾಗಬೇಕಿದ್ದ ಜಾಗವನ್ನು ಪರಿಶೀಲನೆ ಮಾಡಿಸಿದ್ದರು. ಸ್ಥಳ ವೀಕ್ಷಣೆ ಮಾಡಿದ ಸಚಿವರು ಇಲ್ಲಿ ಸೇತುವೆಯ ಅಗತ್ಯವಿದೆ, ಕೇರಳ ಸರಕಾರ ಇಲ್ಲಿ ಸೇತುವೆ ನಿರ್ಮಾಣ ಮಾಡುವುದಿಲ್ಲ, ಕರ್ನಾಟಕ ಸರಕಾರವೇ ಇಲ್ಲಿ ಸೇತುವೆ ನಿರ್ಮಾಣ ಮಾಡಬೇಕಿದೆ, ನದಿ ಕರ್ನಾಟಕ ಜಾಗದಲ್ಲಿ ಇರುವ ಕಾರಣ ನಾವೇ ಏನಾದರೂ ಮಾಡಬೇಕು ಎಂದು ತಿಳಿಸಿದ್ದ ಸಚಿವರು ಈ ಬಗ್ಗೆ ಸರ್ವೆ ಮಾಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆಯನ್ನು ನೀಡಿದ್ದರು. ಮಾ. 24 ರಂದು ಭೇಟಿ ನೀಡಿ ಮಾತುಕೊಟ್ಟಿದ್ದ ಸಚಿವರು ಎಪ್ರಿಲ್ 25 ಕ್ಕೆ 20 ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡಿ ಅನುದಾನ ಮಂಜೂರುಗೊಳಿಸಿದ್ದಾರೆ.
ಸಿರಿಯ ನದಿಗೆ ಸುಮಾರು ೮೦ ಮೀಟರ್ ಉದ್ದದ ಸೇತುವೆ ನಿರ್ಮಾಣವಾಗಲಿದ್ದು ಇದು 10 ಮೀಟರ್ ಅಗಲವನ್ನು ಹೊಂದಿರುತ್ತದೆ. ಕರ್ನಾಟಕ ಗಡಿಯ ಮೂಲಕ ಸೇತುವೆಯ ಸಂಪರ್ಕಕ್ಕೆ 1.5 ಕಿ ಮೀ ರಸ್ತೆಯ ನಿರ್ಮಾಣವಾದರೆ ಕೇರಳ ಸಂಪರ್ಕಕ್ಕೆ ಒಂದು ಕಿ ಮೀ ರಸ್ತೆ ನಿರ್ಮಾಣವೂ ಆಗಬೇಕಿದೆ. ಮಳೆಗಾಲದಲ್ಲಿ ನದಿ ತುಂಬಿ ಹರಿಯುವ ಕಾರಣ ಸೇತುವೆ ಎತ್ತರದಿಂದ ನಿರ್ಮಾಣವಾಗಲಿದೆ.
ಸಿರಿಯ ನದಿ ಪೃಕೃತ್ತಿ ರಮಣೀಯ ಸ್ಥಳವಾಗಿದೆ. ಸುತ್ತಲೂ ಕಾಡಿನಿಂದ ಕೂಡಿದ ಈ ಸ್ಥಳದಲ್ಲಿ ಸೇತುವೆಯ ನಿರ್ಮಾಣವಾಗಿ ಕರ್ನಾಟಕ ಕೇರಳ ಸಂಪರ್ಕ ಸೇತುವಾದಲ್ಲಿ ಈ ಪ್ರದೇಶದಲ್ಲಿ ಪ್ರವಾಸಿತಾಣವನ್ನಾಗಿಯೂ ರೂಪಿಸಬಹುದಾಗಿದೆ ಎಂಬ ಲೆಕ್ಕಾಚಾರವೂ ಈ ಹಿಂದೆ ನಡೆದಿತ್ತು. ಪ್ರಸ್ತುತ ಕಾಸರಗೋಡು ಜಿಲ್ಲೆಯ ಪೆರ್ಲದಿಂದ ಮಾಣಿಲಕ್ಕೆ ಬರಬೇಕಾದಲ್ಲಿ 24 ಕಿ ಮೀ ಕ್ರಯಿಸಬೇಕು ಸೇತುವೆ ನಿರ್ಮಾಣವಾದಲ್ಲಿ ಕೇವಲ ಒಂದೂವರೆ ಏಳೆಂಟು ಕಿ ಮೀ ಸಾಗಿದರೆ ಮಾಣಿಲವನ್ನು ಸಂಪರ್ಕ ಮಾಡಬಹುದಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಈ ಪ್ರದೇಶ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿಯಾಗುವುದರಲ್ಲಿ ಸಂಶಯವೇ ಇಲ್ಲ.
ಮಾಣಿಲದಲ್ಲಿ ಸಿರಿಯ ನದಿಗೆ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರಕಾರ ೨೦ ಕೋಟಿ ಅನುದಾನ ಮಂಜೂರು ಮಾಡಿದೆ, ಇದು ಬಹುಕಾಲದ ಬೇಡಿಕೆಯಾಗಿದ್ದು ಈ ಬಾರಿ ಈಡೇರಿದೆ, ಕಳೆದ ವಿಧಾನಸಭಾ ಚುನಾವಣೆಯ ವೇಳೆ ಗ್ರಾಮಸ್ಥರಿಗೆ ಸೇತುವೆ ನಿರ್ಮಾಣದ ಮಾತುಕೊಟ್ಟಿದ್ದೆ ಅದನ್ನು ಈಡೇರಿಸಿದ ತೃಪ್ತಿ ನನಗಿದೆ. ಈ ಸೇತುವೆ ನಿರ್ಮಾಣವಾದಲ್ಲಿ ಕರ್ನಾಟಕ ಮತ್ತು ಕೇರಳಕ್ಕೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುವುದರ ಜೊತೆ ಎರಡೂ ಭಾಗದ ಗ್ರಾಮದ ಅಭಿವೃದ್ದಿಗೂ ಕಾರಣವಾಗಲಿದೆ. ಸೇತುವೆಯ ಸಂಪರ್ಕ ಮಾಡುವ ಎರಡೂ ಭಾಗದಲ್ಲಿ ಉತ್ತಮ ರಸ್ತೆಯ ನಿರ್ಮಾಣವಾಗಬೇಕಿದೆ ಇದಕ್ಕೆ ಹೆಚ್ಚುವರಿ 6 ಕೋಟಿ ಅನುದಾನದ ಪ್ರಸ್ತಾವನೆಯನ್ನು ಸಲ್ಲಿಸಿದ್ದೇನೆ ಇದು ಶೀಘ್ರವೇ ಮಂಜೂರಾತಿಯ ನಿರೀಕ್ಷೆ ಇದೆ. ಹೊಸ ಸೇತುವೆಯ ಕಾರಣಕ್ಕೆ ಮಾಣಿಲ ಸೇರಿದಂತೆ ವಿಟ್ಲ ಭಾಗದ ಬಹುತೇಕ ಗ್ರಾಮಗಳ ಅಭಿವೃದ್ದಿಗೂ ಇದು ಕಾರಣವಾಗಲಿದೆ. ಅಭಿವೃದ್ದಿಯೇ ನಮ್ಮ ಮೂಲಮಂತ್ರ ಇದಕ್ಕೆ ಸೇತುವೆಯೊಂದು ಸೇತುವಾಗಲಿದೆ. ಅಶೋಕ್ ರೈ, ಶಾಸಕರು ಪುತ್ತೂರು




























