ಮಂಗಳೂರು: ಉಳ್ಳಾಲ ಮದನಿನಗರದಲ್ಲಿ ಮನೆ ಮೇಲೆ ಆವರಣ ಗೋಡೆ ಕುಸಿದು ಒಂದೇ ಕುಟುಂಬದ ನಾಲ್ಕು ಮಂದಿ ಮೃತಪಟ್ಟ ಘಟನೆಯ ಬೆನ್ನಲ್ಲೇ ವಿದ್ಯುತ್ ತಂತಿ ಕಡಿದು ಬಿದ್ದು ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ ನಗರದ ರೊಸಾರಿಯೋ ಬಳಿ ಗುರುವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಉಪ್ಪಿನಂಗಡಿ ಸಮೀಪದ ರಾಮಕುಂಜದ ನಿವಾಸಿ ದೇವರಾಜ್ ಗೌಡ ಮತ್ತು ಹಾಸನ ಮೂಲದ ರಾಜು ಪಾಲ್ಯ ಎಂದು ಗುರುತಿಸಲಾಗಿದೆ. ಮಳೆ ಸಂಬಂಧಿ ಕಾರಣಕ್ಕೆ ಈ ಸಾವು ಸಂಬಂಧಿಸಿದೆ ಎಂದು ತಿಳಿದು ಬಂದಿದೆ.
ದೇವರಾಜ್ ಗೌಡ ಮತ್ತು ರಾಜು ಪಾಲ್ಯ ಅವರು ಇಲ್ಲಿನ ಬಾಡಿಗೆ ರೂಂ ಒಂದರಲ್ಲಿ ವಾಸವಾಗಿದ್ದರು. ಬೆಳಗ್ಗೆ 5 ಗಂಟೆ ಸುಮಾರಿಗೆ ಒಬ್ಬ ಚಾಲಕ ಆಟೋ ಸ್ವಚ್ಛಗೊಳಿಸುತ್ತಿದ್ದ ಸಂದರ್ಭದಲ್ಲಿ ಅವರಿಗೆ ಅಲ್ಲೇ ಇದ್ದ ವಿದ್ಯುತ್ ದೀಪದಿಂದ ತುಂಡಾಗಿ ಬಿದ್ದಿದ್ದ ತಂತಿ ತಗಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
ಇದನ್ನು ನೋಡಿದ ಮತ್ತೊಬ್ಬ ಚಾಲಕ ತಕ್ಷಣವೇ ಗೋಣಿ ಚೀಲ ತಂದು ಅವರನ್ನು ರಕ್ಷಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಪ್ರಯತ್ನ ವಿಫಲಗೊಂಡಿದ್ದು ಇಬ್ಬರೂ ವಿದ್ಯುತ್ ಆಘಾತಕ್ಕೆ ಮೃತಪಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾರೀ ಮಳೆಯಾಗುತ್ತಿದ್ದು ಜಿಲ್ಲಾಡಳಿತ ಗುರುವಾರಂದು ಶಾಲೆಗಳಿಗೆ ರಜೆ ಘೋಷಿಸಿದೆ. ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ.
ನಾಡಿನ ಪ್ರಸಿದ್ಧ ಧಾರ್ಮಿಕ ಶ್ರದ್ಧಾಕೇಂದ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಿದ್ದು ಭಕ್ತರು ನದಿಗೆ ಇಳಿಯದಂತೆ ದೇವಸ್ಥಾನದ ಆಡಳಿತ ಮಂಡಳಿ ಸೂಚನೆ ನೀಡಿದೆ. ದಕ್ಷಿಣ ಕನ್ನಡದಂತೆ ಉಡುಪಿ ಜಿಲ್ಲೆಯಲ್ಲೂ ನಿರಂತರ ಮಳೆಯಾಗುತ್ತಿದೆ.






























